Sunday, February 26, 2012

ಮರಳು ಮತ್ತು ಬುರುಗು 3



ನೀನೋ ಕುರುಡ
ಮತ್ತೆ ನಾನು ಕಿವುಡು ಮೂಕ
ಹಾಗಾಗಿ, ಬಾ...
ತಡವಿ ಕೈ ಕೈ
ಅರಿತುಕೊಳ್ಳೋಣ ಪರಸ್ಪರ.


ಮನುಷ್ಯನ ಮಹತ್ತಿಕೆ ಇರುವುದು
ಅವನು ಏನನ್ನು ಸಾಧಿಸಿದ್ದಾನೋ ಅದರಲ್ಲಲ್ಲ,
ಅವನು ಏನನ್ನು ಸಾಧಿಸಲು ಹಂಬಲಿಸುತ್ತಾನೋ ಅದರಲ್ಲಿ.


ನಾನು ನುಡಿಯುವುದರಲ್ಲಿ ಅರ್ಧದಷ್ಟು ತಳಬುಡವಿಲ್ಲದ್ದು
ಆದರೂ ಅದನ್ನು ಹೇಳುತ್ತೇನೆ ಕೇಳು
ಅದರ ಮಿಕ್ಕರ್ಧ ನಿನಗೆ ತಲುಪೀತೆಂದು.


ಹಾಸ್ಯಪ್ರಜ್ಞೆ ಎಂಬುದು
ಪ್ರಮಾಣದ ಸಮಪ್ರಜ್ಞೆ


ಮಂದಿ ನನ್ನ ವಾಚಾಳಿ ದೋಷಗಳ ಹೊಗಳಿ
ಮೌನ ಮೌಲ್ಯಗಳ ದೂರಿದಾಗ
ಹುಟ್ಟಿದ್ದು ನನ್ನ ಒಬ್ಬಂಟಿತನ.


ತನ್ನ ಎದೆಯ ಬಗೆ ಹಾಡುವಂಥ
ಗಾಯಕನ ಕಾಣದೆ ಬದುಕು
ಮನದ ಎಣಿಕೆಗಳ ಕಾರುವಂಥ
ತತ್ವಜ್ಞಾನಿಯ ಹುಟ್ಟಿಸುವಳು.


ಯಾವತ್ತಿಗೂ ಅರಿತಿರಬೇಕಾದ್ದು 
ಆದರೆ ಕೆಲವೇ ಸಲ ಉಸುರಬೇಕಾದ್ದು 
ಸತ್ಯ.


ನಮ್ಮೊಳಗಿನ ಸತ್ವ ಭಾರೀ ನಿಶ್ಯಬ್ಧ
ಕೂಡಿಟ್ಟುಕೊಂಡದ್ದು ಮಾತ್ರ ಬಲು ವಾಚಾಳಿ.



ಮಾತಿಗಿಳಿದಾಗ ಹೆಂಗಸರಿಬ್ಬರು 
ಹೇಳುವುದು ಏನೂ ಇಲ್ಲ
ಆದರೆ ಹೆಂಗಸೊಬ್ಬಂಟಿ ಆಡಿದಾಗ
ತೋಡಿಕೊಳ್ಳುವಳು ಬದುಕಿನ ಎಲ್ಲ.


ವಾಚಾಳಿಗಳನ್ನು ಮೂಕರಷ್ಟೇ ಅಸೂಯೆಪಡಬೇಕು!


ಪ್ರತಿಯೊಂದು ಬಿತ್ತೂ
ಬಿಗಿದ ಒಂದು ಹಂಬಲ.


- ಖಲೀಲ್ ಗಿಬ್ರಾನ್ ಚುಟುಕು ಪದ್ಯಗಳ ಭಾವಗ್ರಹಣ.

No comments:

Post a Comment