Monday, February 13, 2012

ಸ್ಫಟಿಕದೊಳಗಿಂದ



ಕೆಂಪಿಗೆ ಕುಂಕುಮದ
ಪಚ್ಚೆಗೆ  ಪೈರಿನ  
ನೀಲಿಗೆ ಬಾನಿನ ಹಂಗು ಯಾಕೆ  ಹೇಳು?


ರವಿಯ ಬೆಳಕಿನಲ್ಲಿ ಇವೆಲ್ಲ  ಇದ್ದೂ
ಏನನ್ನೂ ಕಾಣೆವಲ್ಲ!
ವಿಕಾರಿಗಳು ನಾವು;
ವಿಕಾರ  ಆಕಾರದ ಮೂಲಕವಷ್ಟೇ ನಮ್ಮಅರಿವು.


ಬಣ್ಣ ಕಾಣಲು ರೂಪ, ರೂಪಕ್ಕೆ ಆಕಾರ,
ಆಕಾರಕ್ಕೆ ಗಾತ್ರ, ಗಾತ್ರಕ್ಕೆ ಅವಕಾಶ,
ಅವಕಾಶಕ್ಕೆ ಭಾರ... ಹೀಗೇ...
ದೃಷ್ಟಿ ಎಷ್ಟೋ ಅದಷ್ಟೆ ಸೃಷ್ಟಿ. 


ಬಿಳುಪಿಗೆ ಬೇಜಾರಾಗಬೇಡವೆಂದು ಹೇಳು;
ಸತ್ಯ ಸೂರ್ಯ ಕಿರಣದ ಹಾಗೆ.
ಎಲ್ಲ ಬಣ್ಣಗಳಿದ್ದೂ ಕಂಡಷ್ಟೆ ಕಾಣಿಸುವ ಕನ್ನಡಿ
ಹಾಗಾಗಿ ಸತ್ಯಕ್ಕೆ ಸೋಲಿಲ್ಲ.
ಸ್ವರೂಪವಿದ್ದರೆ ತಾನೆ ದಣಿವೂ - ಸೋಲೂ?
ಸೂರ್ಯ ದಣಿದರೆ ಹೇಗೆ!


ಕಲೆಯೂ ಅಂತಹ ಒಂದು ಸತ್ಯ.
ವಿಕಾರ  ಆಕಾರದ ಹಂಗು ಮೀರಿದ
ಸಮಷ್ಟಿಯನ್ನು ಮುಷ್ಟಿಯಲ್ಲಿ ಹಿಡಿದು
ಕ್ಷಣದಲ್ಲಿ ಅನಂತವನ್ನು ಬಿಂಬಿಸುವ
ಕಿರಣಕಣ - ನಿತ್ಯ ನಿರಂತರದ ಪಥ್ಯ.



1 comment:

  1. after a long time i read a poem which really made my day...felt each word and much more...keep on writinig.....

    ReplyDelete